ಶ್ರೀ ಮೌನೇಶ್ವರ ವಚನ ಮಾಲಿಕೆ - 777

ಮೌನೇಶ್ವರರ ವಚನಗಳು - 777

'ಗದ್ಯ ವಚನ'
"ಸದರ ಸಾಹೇಬನ ಕೌಲು ಅಲ್ಲಮರಾಯ ಪರಶಿವನಾಣೆ ಮೀರಿ ನಡೆದರೆ ನೆಲವೆದ್ದು ಬಡಿಯುವದು ಸದರಿಗೆ ಸಂತೋಷವಾಗಲಿ ಸಾಹೇಬರ ನಜರಾಗಲಿ ಸತ್ಯಕ್ಕೆ ಸರಸವು ಸಲ್ಲದು ಉತ್ತಮರ ನೋಯಿಸಲಾಗದು ದೋಷ ತಪ್ಪುವುದೆ ಆಯುಷಕ್ಕೆ ಒಂದೇ ಮಾತು ಪಾರೆ ದೊಡ್ಡದಲ್ಲ ಪರಾಮರಿಕೆ ದೊಡ್ಡದು ಅರ್ಥ ದೊಡ್ಡದಲ್ಲ ಅರುವಿಕಿ ದೊಡ್ಡದು ನಡಿಸಿಕೊಂಡವ ನಾಡಿಗ ದುಡಿಸಿಕೊಂಡವನೇ ಸಾಬ ಶಾಯಿ ಕೆಡಿಸಿಕೊಂಡವ ಕೇಡಿಗ ಕರ್ತರ ಕಡಿಗಿಟ್ಟು ವ್ಯರ್ಥರ ನಡುವಿಟ್ಟರು ಗುರುಹಿರಿಯರ ಮರತರು ವೇಶಿ ಮೆರೆವಳಲ್ಲದೆ ಉಪದೇಶಿ ಮೆರೆವಳೇ ಲೆಂಡ ಮೆರೆವನಲ್ಲದೆ ಮನೆ ಹೆಂಡತಿ ಮೆರೆವಳೆ ಸೂಳೆ ಮೆರೆವಳಲ್ಲದೆ ಗರ್ತಿ ಮೆರೆವಳೆ ಇಕ್ಕಳದ ಲೆಕ್ಕ ಕೊಡದಿದ್ದರೆ ಜಗಕ್ಕೆ ಇಕ್ಕಳ ತಪ್ಪುವದು ಸೃಷ್ಟಿಯ ಶಿವನಾದರೆ ಬಿಡದು ಲಕ್ಷ್ಮೀಯ ಪುತ್ರನಾದರೆ ಬಿಡದು ಸೂರ್ಯ ಚಂದ್ರಾದಿಗಳು ತಮ್ಮ ಆಯಕ್ಕೆ ಬಂದವರು ಅವರಿಬ್ಬರಿಗೆ ಹೊರ್ತು ರಾಯರಾಗಲಿ ಪಾಚ್ಯರಾಗಲಿ ನಮ್ಮ ಆಯವನು ಬಿಡೆವು ನಾಡಿಗ ದೇಸಾಯಿ ಗೌಡ ಕುಲಕರ್ಣಿ ಓಜ ವಕ್ಕಲು ಇಂತು ಸಹಿತವಾಗಿ ಆರುದರುಶನದವರು ನೂರಾವಂದು ಕುಲದವರು ಜೋಗಿ ಗೋರವ ಜಂಗಮ ದಾಸಿ ದೋಷ ಮುಲ್ಲಾ ಖಾಜಿ ಇಂತೀ ಸಹಿತವಾಗಿ ಇಕ್ಕಳ ಜಗದ ಕೈಗೆ ಇಕ್ಕಳ ಹೊಕ್ಕಳ ಕೊಯ್ದ ಕುಡುಗೋಲು ತೆತ್ತೀಸಕೋಟಿ ದೇವತೆಯರು ಸುತ್ತಿಗೆಯ ಮಕ್ಕಳು ಪುಚ್ಚಿಯ ಮಕ್ಕಳು ಜಗವೆಲ್ಲ ನಾನಾ ದೇವರು ಚಾಣದ ಮಕ್ಕಳು ಯೋನಿಯ ಮಕ್ಕಳು ಜಗವೆಲ್ಲ ಹುಚ್ಚರಾಗಿ ಕೆಡಬೇಡಿರಿ ಕುಲಮಿ ಇಲ್ಲದಿದ್ದರೆ ಕುಲವಿಲ್ಲ ಗೋತ್ರವಿಲ್ಲ ಅನೇಕ ಕುಲವು ಕುಲಮಿ ಮಾತ್ರದಲ್ಲಿ ಪುಟ್ಟಿದವೆಂದು ಒಕ್ಕಲುತನಕ್ಕೆ ಕುಲವುಂಟು ವಾಳಿತನಕ್ಕೆ ಕುಲವಿಲ್ಲ ಕಳ್ಳತನಕ್ಕೆ ಕೈ ಕಾಲು ಸುಳ್ಳನ ತಲೆ ಮನೆ ತಳ್ಳಿಕೋರರಿಗೆ ಉಳಿವಿಲ್ಲ ಧರ್ಮವ ಕೇಳಿರೆಂದು ನಿರ್ಣಯಕ್ಕೆ ಅರಮನೆ ಹುಟ್ಟಿಸಿದರು ಕರ್ಮ ಮುನಸೀಫ ಮಾಡಬೇಕಂತ ಮುನಸೀಫ ಮಾಡದಿದ್ದರೆ ಮಳೆ ಹೋದೀತು ಬೆಳೆ ಕೆಟ್ಟೀತು ಜಗವು ಭ್ರಷ್ಟವಾದೀತು ಮುನಸೀಫ ಮಾಡಿದವನೆ ಮುಲ್ಲಾ  ಆರೋಪ ಮಾಡಿದವನೆ ಅರಸು ಮೂಕಾರಿ ಮಾಡಿದವನೆ ಮುಡದಾರ ಅರ್ತವರಿಗೆ ಸದರು ಮರ್ತವರಿಗೆ ಮರಣ ಸಾಹೇಬರ ಸಭೆಗೆ ಶರಣು ಶರಣಾರ್ಥಿ, ಬಸವಣ್ಣ"

ವಚನಾರ್ಥ :-
ಸದರ ಸಾಹೇಬನ ಕೌಲು ಅಂದರೆ, ರಾಜಾಜ್ಞೆಯನ್ನು ಮೀರಿ ನಡೆದರೆ ನೆಲವೆದ್ದು ಬಡೆವದು, ರಾಜ ಸಾಹೇಬರ ದಯಾ ದೃಷ್ಟಿ ಪ್ರಜೆಗಳ ಮೇಲೆ ಇರಬೇಕು. ರಾಜನಂತಹ ಪ್ರಜಾಪಾಲಕನ ಹಾಗೂ ಸತ್ಯದ ಪರಿಪಾಲಕನ ಜೊತೆ ಸರಸ ಸಲ್ಲದು, ಉತ್ತಮರನ್ನು ನೋಯಿಸಬಾರದು, ನೋಯಿಸಿದರೆ ಪಾಪ ಹತ್ತುತ್ತದೆ, ಆಯುಷ್ಯ ಕಡಿಮೆಯಾಗುತ್ತದೆ.

ಪಾಕಿ ಅಂದರೆ ತಾಮ್ರದ ದುಡ್ಡು. ದುಡ್ಡಿಗಿಂತ, ಸಂಪತ್ತಿಗಿಂತ ಸಂಬಂಧ ಬಹಳ ದೊಡ್ಡದು. ಹಣಕ್ಕಿಂತ ತಿಳುವಳಿಕೆ ದೊಡ್ಡದು. ನಡೆಸಿಕೊಳ್ಳುವುದಕ್ಕಿಂತ ದುಡಿಸಿಕೊಳ್ಳುವುದು ದೊಡ್ಡದು. ಅರಸನ ಕೆಳಗಿನ ಅಧಿಕಾರಿಗಳು ನಿಷ್ಟರಾಗಿರಬೇಕು. ಕರ್ತೃ ಅಂದರೆ ನಿರ್ಮಿಸುವವನನ್ನು ಹಿಂದಕ್ಕಿಟ್ಟು, ನಿರುಪಯುಕ್ತರನ್ನು ನಡುವಿಟ್ಟು ಗುರು ಹಿರಿಯರಾದ ಜ್ಞಾನಿಗಳನ್ನು ಕಲಿಯುಗದಲ್ಲಿ ಜನ ಮರೆತರು.

ಕಲಿಯುಗದಲ್ಲಿ ವೇಶ್ಯೆ ಮೆರೆವಳಲ್ಲದೆ ಸಾತ್ವಿಕಳು ಮೆರೆಯಲಾರಳು, ಭಂಡರಿಗೆ ಬೆಲೆ ಬರುವುದಲ್ಲದೆ ಮನೆ ಹೆಂಡತಿಗೆ ಬೆಲೆಯಿಲ್ಲ. ಸೂಳೆಗೆ ಬೆಲೆ ಹಾಗೂ ಗೌರವ ದೊರೆಯುತ್ತವೆ ಹೊರತು ಪತಿವ್ರತೆಗೆ ಗೌರವಗಳು ದೊರೆಯುವುದಿಲ್ಲ. ಅಂದರೆ ಸಾತ್ವಿಕರು ಹಾಗೂ ಜ್ಞಾನಿಗಳಿಗಿಂತ ತುಂಡ, ಲೆಂಡ, ಮತಿಹೀನ ಮಂದಿಗೆ ಈ ಕಾಲದಲ್ಲಿ ಗೌರವ ಮರ್ಯಾದೆಗಳು ಜಾಸ್ತಿ.

ಯಾವುದೇ ಶ್ರೇಷ್ಠ ಮನುಷ್ಯನಾಗಲೀ ದೇವರಾಗಲಿ ತಾನು ಮಾಡಿಕೊಂಡ ಕೆಲಸಕ್ಕೆ ಪ್ರತಿಯಾಗಿ ಪ್ರತಿಫಲ ಕೊಡಬೇಕು, ಇದು ಧರ್ಮ. ಇಕ್ಕಳವು ಕಸುಬುದಾರ ಪಾಂಚಾಳರ ಅಥವಾ ವಿಶ್ವಕರ್ಮರ ಬಹುದೊಡ್ಡ ಅಸ್ತ್ರ. ಅದರಿಂದಲೇ ಲೋಹಗಳಲ್ಲಿ ಕಟ್ಟಿಗೆಗಳಲ್ಲಿ ಜನೋಪಯೋಗಿ ವಸ್ತುಗಳನ್ನು ಸೃಷ್ಟಿಸುವುದು. ಅಂತಹ ದುಡಿಮೆಗಾರ ಪಾಂಚಾಳರ ಆಯವನ್ನು (ಕೂಲಿ)ಮುಳುಗಿಸಿಕೊಳ್ಳುವವನಿಗೆ ಬಾಧೆ ತಪ್ಪದು. ಇದಕ್ಕೆ ಮನುಷ್ಯರಷ್ಟೇ ಅಲ್ಲ, ಸ್ವತಃ ಶಿವನೂ ಆಯ ಕೊಡಬೇಕು. ಜಗತ್ತಿಗೆ ಬೆಳಕು ನೀಡುವ, ಜೀವಚರಗಳ ಸೃಷ್ಟಿಗೆ ಕಾರಣವಾಗುವ ಸೂರ್ಯ-ಚಂದ್ರರನ್ನು ಹೊರತುಪಡಿಸಿ ಜಗತ್ತಿನಲ್ಲಿ ರಾಜರಾಗಲಿ ಬಾದಶಹ(ಅರಸ)ನಾಗಲೀ ಎಲ್ಲರೂ ದುಡಿದವನ ಕೂಲಿ ಕೊಡಲೇಬೇಕು, ಕೊಡದಿದ್ದರೆ ಪಾಂಚಾಳರು ಬಿಡಲಾರರು. 
ನಾಡಿಗ, ಊರ ಗೌಡ, ದೇಸಾಯಿ, ಕುಲಕರ್ಣಿ, ಓಜ, ಒಕ್ಕಲು ಇಂತು ಆರು ದರುಶನದವರಿಗೆ, ಜೋಗಿ, ಗೊರವ, ಜಂಗಮ, ದಾಸಿ, ದೋಷಿ, ಮುಲ್ಲಾ, ಖಾಜಿ, ಇಂತಿ ಸಹಿತವಾಗಿ ನೂರೊಂದು ಕುಲದವರಿಗೆ ಪಾಂಚಾಳನ  ಇಕ್ಕಳ ಮತ್ತು ಅದರಿಂದ ರೂಪಗೊಳ್ಳುವ ಕುಡುಗೋಲು ಬೇಕು. ಹೆತ್ತ ತಾಯಿಯಿಂದ ಮಗುವನ್ನು ಬೇರ್ಪಡಿಸಲು ಕರಳು ಹುರಿ ಕೊಯ್ಯಲು ಕುಡುಗೋಲು ಜಗದ ಕೈಗೆ ಬೇಕೆ ಬೇಕು.

ಮೌನೇಶ್ವರರು ಆರು ದರ್ಶನ ಮತ್ತು ನೂರೊಂದು ಕುಲಗಳಿಗೆ ಇಲ್ಲಿ ಹೊಸ ಭಾಷ್ಯ ಬರೆದಂತಿದೆ. ಆರು ದರುಶನಗಳೆಂದರೆ ಷಟ್‌ದರುಶನಗಳೆಂದು ಪ್ರಚಲಿತವಾಗಿದ್ದ ವೈದಿಕ ಮೂಲದ ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವ ಹಾಗೂ ಉತ್ತರ ಮೀಮಾಂಸೆಗಳನ್ನು ನಿರಾಕರಿಸಿ, ಜನಪ್ರತಿನಿಧಿಗಳಾದ ನಾಡಿಗ, ದೇಸಾಯಿ, ಗೌಡ, ಕುಲಕರಣಿ, ಓಜ, ಒಕ್ಕಲಿಗ ಇವರನ್ನು ಆರು ದರುಶನದವರು ಎಂದು ಕರೆಯುತ್ತಾರೆ. ಹೊಲಿ ಹದಿನೆಂಟು ಜಾತಿ ಎಂದು ಪ್ರಚಲಿತವಾಗಿದ್ದ ಹದಿನೆಂಟು ಜಾತಿಗಳಿಗೆ ಪ್ರತಿಯಾಗಿ ನೂರಾವಂದು ಕುಲಗಳನ್ನು ಹೇಳುತ್ತಾರೆ. ಅದರಲ್ಲೂ ಸಾಮಾಜಿಕ ಸ್ಥರಗಳಲ್ಲಿ ತೀರ ಉಪೇಕ್ಷಿತವಾದ ಜೋಗಿ, ಗೊರವ, ಜಂಗಮ, ದಾಸಿ, ದೋಷಿ, ಮುಲ್ಲ, ಖಾಜಿ ಇಂತೀ ಸಹಿತವಾದ ನೂರಾವಂದು ಕುಲಗಳನ್ನು ಹೆಸರಿಸುತ್ತಾರೆ. ಮೌನೇಶ್ವರರು ವರ್ಗ ಮತ್ತು ವರ್ಣ ವ್ಯವಸ್ಥೆಯನ್ನು ಅದರ ತಿಳುವಳಿಕೆಗಳನ್ನು ವಿಸರ್ಜಿಸಿ ಕುಲಮೂಲ ಸಂಸ್ಕೃತಿಯನ್ನೇ ಎತ್ತಿ ಹಿಡಿಯುತ್ತಾರೆ. ಕುಲಪದ್ಧತಿ, ಜಾತಿ ಸಮುದಾಯಕ್ಕಿಂತ ಭಿನ್ನ ಹಾಗೂ ಸ್ವತಂತ್ರವಾದುದು. 

'ಜಗದಲ್ಲಿರುವ ಮೂವತ್ಮೂರು ಕೋಟಿ ದೇವತೆಗಳು ಸುತ್ತಿಗೆಯ ಮಕ್ಕಳಾದರೆ ಜಗತ್ತಿನಲ್ಲಿ ಹುಟ್ಟಿದವರೆಲ್ಲರೂ ತಾಯಿ ಗರ್ಭದಿಂದ ಬಂದವರು'. ಹಾಗೆ ಜಗತ್ತಿನಲ್ಲಿ ಪೂಜೆಗೊಳ್ಳುವ ವಿವಿಧ ದೇವರುಗಳೆಲ್ಲರೂ ಚಾಣದ ಮಕ್ಕಳು. ಇದನ್ನು ಹುಚ್ಚರಂತೆ ಅಲ್ಲಗಳೆಯಲಾಗದು. ಕುಲಮಿಯಿಲ್ಲದಿದ್ದರೆ ಕುಲಗೋತ್ರಗಳ ಬೆಳವಣಿಗೆಯೇ ಆಗುತ್ತಿರಲಿಲ್ಲ. ನಾಗರಿಕತೆಯ ಮೂಲವೇ ಕುಲಮೆ ಹಾಗೂ ಕಬ್ಬಿಣ. ಹೀಗಿರುವಾಗ ಶ್ರೇಷ್ಠ, ಕನಿಷ್ಠ ಅಯೋನಿಜ, ಯೋನಿಜ, ನರ-ಹರ ಎನ್ನುವ ಭೇದಗಳು ಮನುಷ್ಯ ವಿರೋಧಿ ಯಾದಂಥವು ಎಂಬ ಮಾತುಗಳನ್ನು ಮೌನೇಶ್ವರರು ತಮ್ಮ ಹಲವಾರು ವಚನಗಳಲ್ಲಿ ಹೇಳಿದ್ದಾರೆ.
ಒಕ್ಕಲುತನಕ್ಕೆ ಕುಲವುಂಟು, ವಾಳಿತನ ಅಂದರೆ ಬೇಡವಾದವ, ಜಗಳಗಂಟನಿಗೆ, ಅಜ್ಞಾನಿಗೆ ಕುಲವಿಲ್ಲ. ಕಳ್ಳರಿಗೆ ಸುಳ್ಳರಿಗೆ ಜಗಳಗಂಟರಿಗೆ ಈ ಲೋಕದಲ್ಲಿ ಉಳಿವಿಲ್ಲ. ಕಾರಣ ನ್ಯಾಯ ನೀತಿಗಳು ಉಳಿಯಬೇಕೆಂದು ಅರಮನೆ ಹುಟ್ಟಿಸಿದರು. ಮೌನೇಶ್ವರರು ಪ್ರಭುತ್ವವನ್ನು ವಿರೋಧಿಸುತ್ತಲೇ ಪರ್ಯಾಯ ಪ್ರಭುತ್ವವನ್ನು ನಿರ್ಮಿಸುತ್ತಾರೆ. ನ್ಯಾಯ, ನೀತಿ, ಸತ್ಯ, ಧರ್ಮ, ತತ್ವ, ಸುಖ, ಸಂತೋಷ, ಪ್ರಜಾಕಾಳಜಿಯುಳ್ಳ ಅರಸೊತ್ತಿಗೆ ಅದು. ಆ ಅರಸೊತ್ತಿಗೆಯಲ್ಲಿ ಅಧರ್ಮ, ಅನೀತಿಗಳಿಗೆ, ಜಡತ್ವಕ್ಕೆ, ದರ್ಪಕ್ಕೆ ಅವಕಾಶಗಳಿಲ್ಲ. ಅದು ಸಮೃದ್ಧ ಸಂತೃಪ್ತ ಸಮಾನತೆಯ ಅರಮನೆ.

ಜಗತ್ತಿನ ನ್ಯಾಯ ನೀತಿಗಳ ತೀರ್ಮಾನವನ್ನು ನ್ಯಾಯಾಧೀಶನೇ ಮಾಡಬೇಕು. ಬೇರೆಯವರು ಅದರಲ್ಲಿ ತಲೆ ಹಾಕಬಾರದು. ಅರಸನಿಗೂ ಪ್ರಧಾನಿಗೂ ಅದರ ಮೇಲೆ ಸವಾರಿ ಮಾಡುವ ಹಕ್ಕಿಲ್ಲ. ಅಂತಹ ನ್ಯಾಯಾಧೀಶನನ್ನು ನೇಮಿಸಿದವನೇ ದೇವರು ಹಾಗೂ ಸತ್ಯದ ಪ್ರತೀಕವಾದ ಮುಲ್ಲಾ. ಆಳುವವನೇ ಆರೋಪಿಯಾದಾಗ ಸತ್ಯದ ಪ್ರತಿನಿಧಿಯಾದ ಮುನ್ಸಿಪನೆ ನ್ಯಾಯದಾನ ಮಾಡಬೇಕು. ನ್ಯಾಯಾಂಗ ವ್ಯವಸ್ಥೆ ಮತ್ತು ಅದರ ಸ್ವಾತಂತ್ರ್ಯವನ್ನು ವಚನ ಎತ್ತಿ ಹಿಡಿದಿದೆ. 
ಈ ವಚನ ಇಂದಿನ ರಾಜಕೀಯ ವ್ಯವಸ್ಥೆಯನ್ನು ಬಿಂಬಿಸುವಂತಿದೆ. ಇಂದು ಧೀಮಂತ ನಾಯಕರಿಗಿಂತ ಕಿಂಗ್‌ ಮೇಕರ್‌ಗಳ ಹಾವಳಿ ಜಾಸ್ತಿಯಾಗುತ್ತಿದೆ. ಹಣವಂತರು, ಅನೀತಿವಂತರು, ಪುಡಾರಿಗಳು ತಮ್ಮ ಸ್ವಾರ್ಥಸಾಧನೆಗಾಗಿ ನಾಯಕನನ್ನು, ಯಜಮಾನನನ್ನು ಸೃಷ್ಟಿ ಮಾಡುತ್ತಾರೆ. ಅವರನ್ನು ಆಯತವಾದ ಜಾಗದಲ್ಲಿ ಕೂಡ್ರಿಸಿ ತಮಗೆ ಅನುಕೂಲವಾಗುವ ತೀರ್ಮಾನಗಳನ್ನು ರೂಪಿಸುವಂತೆ ಮಾಡುತ್ತಾರೆ. ಅಂಥವರು ಮೌನೇಶ್ವರರ ಕಾಲದಲ್ಲಿಯೂ ಇದ್ದರು. ಪುಡಾರಿಗಳಿಗೆ ಹೊಂದಿಕೊಂಡವರು ಬದುಕುತ್ತಾರೆ. ಹೊಂದಿ ಕೊಳ್ಳದೆ ಪ್ರಾಮಾಣಿಕವಾಗಿ ಉಳಿದವನ ಮೇಲೆ ಇಲ್ಲಸಲ್ಲದ ಆಪಾದನೆ ಹೊರೆಸಿ ಅವರನ್ನು ಇದ್ದು ಸತ್ತಂತೆ ಮಾಡಿಬಿಡುತ್ತಾರೆ. ಹೀಗಾಗಿ ಸಾಹೇಬರ ಸಭೆ ಅಂದರೆ ಅರಸನ ಸಭೆ ಎಂಬುದು ಇಂತಹ ಪುಡಾರಿಗಳಿಂದ ಅಧರ್ಮಿಗಳಿಂದ ತುಂಬದೆ ಜ್ಞಾನಿಗಳಿಂದ, ಪ್ರಜ್ಞಾವಂತರಿಂದ ತುಂಬಿರಬೇಕು. ಅಂತಹ ಸಭೆಗೆ ಶರಣು ಶರಣಾರ್ಥಿ ಎಂದು ಮೌನೇಶ್ವರರು ಈ ವಚನದ ಮೂಲಕ ಹೇಳುತ್ತಾರೆ.

Post a Comment

0 Comments